ಯಕ್ಷಜಗತ್ತಿಗೆ ಮೇರು ಕಲಾವಿದರನ್ನು ಸಮರ್ಪಿಸಿದ ಖ್ಯಾತಿ ಕಾಸರಗೋಡಿಗೆ: ಪ್ರಭಾಕರ ಜೋಶಿ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಡಿಸೆ೦ಬರ್ 30 , 2013
|
ಡಿಸೆ೦ಬರ್ 30, 2013
|
ಯಕ್ಷಜಗತ್ತಿಗೆ ಮೇರು ಕಲಾವಿದರನ್ನು ಸಮರ್ಪಿಸಿದ ಖ್ಯಾತಿ ಕಾಸರಗೋಡಿಗೆ: ಪ್ರಭಾಕರ ಜೋಶಿ
ಉಳಿಯ :
ಯಕ್ಷಗಾನಕ್ಕೆ ವಿಸ್ತಾರವಾದ ಪರಂಪರೆಯನ್ನು ಒದಗಿಸಿಕೊಡುವ ಜತೆಗೆ ಮೇರು ಕಲಾವಿದರನ್ನು ಯಕ್ಷಜಗತ್ತಿಗೆ ಸಮರ್ಪಿಸಿದ ಖ್ಯಾತಿ ಕಾಸರಗೋಡಿಗೆ ಸಲ್ಲುತ್ತದೆ ಎಂದು ಅರ್ಥಧಾರಿ, ಸಂಸ್ಕೃತಿ ಚಿಂತಕ ಡಾ.ಎಂ.ಪ್ರಭಾಕರ ಜೋಶಿ ತಿಳಿಸಿದ್ದಾರೆ.
ಉಳಿಯ ಶ್ರೀ ಧನ್ವಂತರಿ ಯಕ್ಷಗಾನ ಕಲಾ ಸಂಘದ ಸುವರ್ಣ ಮಹೋತ್ಸವ ಸಮಾರಂಭದ ಅಂಗವಾಗಿ ಶನಿವಾರ ರಾತ್ರಿ ಪರಕ್ಕಿಲ ಶ್ರೀ ಮಹಾದೇವ ದೇವಾಲಯದ ನಟರಾಜ ಮಂಟಪದಲ್ಲಿ ನಡೆದ ಸ್ಮರಣ ಸಂಚಿಕೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ಹಲವಾರು ಮನೆತನಗಳು ಯಕ್ಷಗಾನಕ್ಕೆ ಮಹತ್ವದ ಕೊಡುಗೆ ನೀಡುತ್ತಾ ಬಂದಿವೆ. ಆದರೆ ಇವುಗಳ ಸಮಗ್ರ ದಾಖಲೀಕರಣ ಇದುವರೆಗೆ ನಡೆಯದಿರುವುದು ವಿಷಾದನೀಯವಾಗಿದೆ. ಯಕ್ಷಗಾನಕ್ಕೆ ಅನನ್ಯ ಕೊಡುಗೆ ನೀಡಿರುವ ಮನೆತನಗಳ ಬಗ್ಗೆ ದಾಖಲೀಕರಣ ಕೆಲಸವನ್ನು ಕಾಸರಗೋಡು ಸರಕಾರಿ ಕಾಲೇಜಿನ ಕನ್ನೆ ವಿಭಾಗ ಕೈಗೆತ್ತಿಕೊಳ್ಳಬೇಕು. ಈ ಮೂಲಕ ಮುಂದಿನ ತಲೆಮಾರಿಗೆ ಕಾಸರಗೋಡಿನ ಯಕ್ಷಗಾನದ ಪರಂಪರೆಯನ್ನು ತಿಳಿಸುವ ಕಾರ್ಯ ಆಗ ಬೇಕಾಗಿದೆ ಎಂದರು.
ಯಕ್ಷಗಾನ ವಿಘಟಿತವಾಗಿ ರೂಪಾಂತರಗೊಳ್ಳುತ್ತಿರುವ ಇಂದಿನ ಕಾಲಘಟ್ಟದಲ್ಲಿ ಯಕ್ಷಗಾನದ ಮೂಲ ಪರಂಪರೆಗೆ ಚ್ಯುತಿ ಬಾರದ ರೀತಿಯಲ್ಲಿ ಪೋಷಿಸಬೇಕಾದ ಜವಾಬ್ದಾರಿ ಇಂದಿನ ಕಲಾವಿದರಲ್ಲಿದೆ ಎಂದು ಅವರು ಹೇಳಿದರು. ಯಕ್ಷಗಾನದ ದಿಗ್ಗಜ ಶೇಣಿ ಗೋಪಾಲಕೃಷ್ಣ ಭಟ್ ಅವರ ಹೆಸರಲ್ಲಿ ಸೂಕ್ತ ಸ್ಮಾರಕ ನಿರ್ಮಾಣವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಘಟಕ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಯಕ್ಷಗಾನ ನಾಟಕ ಅಕಾಡೆಮಿ ಅಧ್ಯಕ್ಷ ಎಂ.ಎಲ್. ಸಾಮಗ 'ಸುವರ್ಣ ಕಲಶ' ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಸಂಶೋಧಕ, ಸಾಹಿತಿ ಡಾ. ಪಾದೆಕಲ್ಲು ವಿಷ್ಣುಭಟ್, ರವೀಂದ್ರ ಆಳ್ವ ಬೆಂಗಳೂರು, ಶಿವರಾಮ ಕಾಸರಗೋಡು ಉಪಸ್ಥಿತರಿದ್ದರು.
ಕೃಷಿ ಸಂಪಾದಕ ಡಾ.ಕಾರಂತ ಪೆರಾಜೆ ಕೃತಿ ಬಗ್ಗೆ ಮಾಹಿತಿ ನೀಡಿದರು. ಸಮಿತಿ ಗೌರವಾಧ್ಯಕ್ಷ ಉಳಿಯತ್ತಾಯ ವಿಷ್ಣು ಆಸ್ರ ಗೌರವಾರ್ಪಣೆ ಸಲ್ಲಿಸಿದರು.
ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ ಸ್ವಾಗತಿಸಿದರು. ವೇಣುಗೋಪಾಲ ಶೇಣಿ ವಂದಿಸಿದರು.
ಕೃಪೆ :
http://www.vijaykarnataka.com
|
|
|